Friday, 8 March 2019

ಲಕ್ಷ್ಮಿಯ ಸಂಗಾತಿ ಗೂಬೆ!


ಲಕ್ಷ್ಮಿಯ ಸಂಗಾತಿ ಗೂಬೆ!

ನಮ್ಮ ದೇಶದ ಒರಿಸ್ಸಾ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಲಕ್ಷ್ಮಿಯ ಚಿತ್ರಗಳಲ್ಲಿ ಶ್ವೇತ ವರ್ಣದ ಗೂಬೆಯನ್ನೂ ಕಾಣಬಹುದು. ಅಲ್ಲಿನ ಸ್ಥಳೀಯರ ನಂಬಿಕೆಯ ಪ್ರಕಾರ ಬಿಳಿ ಬಣ್ಣದ ಗೂಬೆಯನ್ನು ಪಾವಿತ್ರ್ಯತೆಗೆ ಹೋಲಿಸಿ ಅದು ದೇವಿಯೊಂದಿಗೆ ಇರುವುದರಿಂದ, ಶುಭ ಸೂಚಕವೆಂದು ಭಾವಿಸುವರು. ಈ ಗೂಬೆ ಯಾರು? ಇದರ ಬಗ್ಗೆ ಎಲ್ಲೂ ವಿವರಗಳು ಕಂಡುಬರುವುದಿಲ್ಲ.

ಕೆಲವರು, ಲಕ್ಷ್ಮಿಯು ಗೂಬೆಯ ಮೇಲೆ ಪಯಣಿಸುತ್ತಾಳೆ ಎಂದರೆ; ಮತ್ತೆ ಕೆಲವರು, ಲಕ್ಷ್ಮಿಯು ಆನೆಯ ಮೇಲೆ ಕುಳಿತು ಪ್ರಯಾಣಮಾಡುತ್ತಿರುವಾಗ ಗೂಬೆಯು ಅವಳನ್ನು ಅನುಸರಿಸುತ್ತದೆ ಎನ್ನುವರು. ಆನೆಯು ಶಕ್ತಿ, ಸಂಪತ್ತು ಹಾಗೂ ಗಾಂಭೀರ್ಯತೆಯೊಂದಿಗೆ ಇರುವುದರಿಂದ ಅದು ಲಕ್ಷ್ಮಿಗೆ ವಾಹನವಾಗುವುದು ಸೂಕ್ತವೆನಿಸುತ್ತದೆ.

ಗೂಬೆಗಳು ಸದಾ ಒಂಟಿ ಪ್ರಾಣಿ, ಹಗಲು ಹೊತ್ತಿನಲ್ಲಿ ನಿದ್ರಿಸಿ ರಾತ್ರೆಯೆಲ್ಲಾ ಎದ್ದಿದ್ದು ಆಹಾರವನ್ನು ಹುಡುಕುವುದು. ಅದರ ರಾತ್ರೆಯಲ್ಲಿನ ಚಟುವಟಿಕೆ ಹಾಗೂ ಕೆಟ್ಟದಾಗಿ ಕೂಗುವುದರಿಂದ ಅದನ್ನು ದುರಾದೃಷ್ಟ ಮತ್ತು ಸಾವಿಗೆ ಹೋಲಿಸಿ ಹಾಗೂ ಅದರಿಂದಾಗಿ ಗೂಬೆಯು ಲಕ್ಷ್ಮಿಯ ಅವಳಿ ಹಿರಿಯ ಸಹೋದರಿ ಅಲಕ್ಷ್ಮಿಯೆಂದು ಎಲ್ಲರೂ ಭಾವಿಸುವರು. ಅಲಕ್ಷ್ಮಿಯು ದುಃಖ ಹಾಗೂ ದುರಾದೃಷ್ಟಗಳ ದೇವತೆಯೆನ್ನುವರು. ಆದರೆ ಇದೇ ಗೂಬೆಯ ಕಣ್ಣುಗಳು ದುಂಡಗಿದ್ದು ಅದು ಅತ್ತಿತ್ತ ಚಲಿಸದೇ ನೇರವಾಗಿ ದುರುಗುಟ್ಟಿಕೊಂಡು ನೋಡುವುದರಿಂದ ಗೂಬೆಯನ್ನು ಪ್ರಪಂಚದ ಅನೇಕ ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ಪುರಾತನ ಗ್ರೀಸ್ ದೇಶದಲ್ಲಿ ಬುದ್ಧಿವಂತಿಕೆಗೆ ಹೋಲಿಸುವರು. ಗ್ರೀಸ್ ದೇಶದಲ್ಲಿ ಗೂಬೆಯನ್ನು ಬುದ್ಧಿಯ ದೇವತೆಯಾದ ಅಥೆನ ಎಂದು ಪರಿಗಣಿಸುವರು. “ದುಂಡು ಕಣ್ಣುಗಳುಎಂಬ ಪದವನ್ನು ಪೂರ್ವ ಭಾರತದಲ್ಲಿ ಜಗನ್ನಾಥನಿಗೆ ಹೋಲಿಸಿ, ಜಗನ್ನಾಥ ದೈವವನ್ನುಗುಂಡು ಕಣ್ಣಿನ ದೈವಎಂದು ಕರೆಯುವರು. ಇದರಿಂದಾಗಿ ಇಲ್ಲಿನ ಜನರು ಗೂಬೆಯು ಲಕ್ಷ್ಮಿಯ ಪತಿಯಾದ ವಿಷ್ಣುವನ್ನು ಪ್ರತಿನಿಧಿಸುವುದೆಂದೂ ಊಹಿಸುತ್ತಾರೆ. ಈ ಆಲೋಚನೆಯನ್ನು ಬೆಂಬಲಿಸುವಂತೆ ಹಿಂದೂ ಪುರಾಣಗಳಲ್ಲಿ ದೇವತೆಗಳ ವಾಹನವು ಯಾವಾಗಲೂ ಪುಲ್ಲಿಂಗವಾಗಿರುವುದು, ಸ್ತ್ರೀಲಿಂಗವಲ್ಲ. ಆದರೆ ಲಕ್ಷ್ಮಿಯು ತನ್ನ ಪತಿಯನ್ನೇ ವಾಹನವನ್ನಾಗಿಸಿಕೊಂಡು ಪ್ರಯಾಣಿಸುವುದೆಂಬ ಅಲೋಚನೆಯು ಸ್ತ್ರೀವಾದಿಗಳಿಗೆ ಹಾಗೂ ಸಂಪ್ರದಾಯವಾದಿಗಳಿಗೆ ಒಪ್ಪಿಗೆಯಾಗುವುದಿಲ್ಲ. ಅವರುಗಳು ಗೂಬೆಯು ಲಕ್ಷ್ಮಿಯ ಜೊತೆ ಇರುತ್ತದೆ ಅಷ್ಟೇ ಹೊರತು ಅವಳು ಅದರ ಮೇಲೆ ಸವಾರಿ ಮಾಡುವುದಿಲ್ಲ ಎಂಬುದಾಗಿ ಆಗ್ರಹಿಸುತ್ತಾರೆ. ಲಕ್ಷ್ಮಿಯು ಗೂಬೆಯ ಮೇಲೆ ಸವಾರಿ ಮಾಡದೇ ಇದ್ದಲ್ಲಿ ಅದು ಇಲ್ಲವೇ ವಿಷ್ಣುವಿರಬೇಕು ಅಥವಾ ಅವಳ ಅವಳಿ ಸಹೋದರಿ(ಹಿರಿಯ), ಅಲಕ್ಷ್ಮಿ ಇರಬೇಕು.

ಆದರೆ ವಿಷ್ಣುವು ಲಕ್ಷ್ಮಿಯನ್ನು ಹಿಂಬಾಲಿಸುವುದಿಲ್ಲ; ಬದಲಾಗಿ ಅವಳೇ ವಿಷ್ಣುವನ್ನು ಹಿಂಬಾಲಿಸುವಳು ಹಾಗೂ ವಿಷ್ಣುವು ಸದಾ ಎಲ್ಲೇ ಹೋಗಲಿ ಅವನ ಉದ್ದೇಶವು ಧರ್ಮವನ್ನು ಎತ್ತಿಹಿಡಿಯುವುದೇ ಆಗಿರುತ್ತದೆ. ಅಲಕ್ಷ್ಮಿಯು ಹಿರಿಯ ಸಹೋದರಿಯಾದ್ದರಿಂದ ಸದಾ ಲಕ್ಷ್ಮಿಯ ಜೊತೆಯಲ್ಲೇ ಇರುವಳು. ಕೆಲವೆಡೆ ಚಿತ್ರಪಟಗಳಲ್ಲಿ ಲಕ್ಷ್ಮಿಯು ವಿಷ್ಣು ಮತ್ತು ಗೂಬೆ ಇಬ್ಬರೊಂದಿಗೂ ಇರುವುದನ್ನು ಗಮನಿಸಬಹುದು. ಕಲೆಗೆ ಸಂಬಂಧಿಸಿದ ಚರಿತ್ರಕಾರರ ಅಭಿಪ್ರಾಯದ ಪ್ರಕಾರ ಅಲಕ್ಷ್ಮಿಯನ್ನು ಲಕ್ಷ್ಮಿಯೊಂದಿಗೆ ಚಿತ್ರಿಸುವುದು ಅಶುಭಸೂಚಕವಾದದ್ದರಿಂದ ಅವಳನ್ನು ಗೂಬೆಯನ್ನಾಗಿ ಚಿತ್ರಿಸುವರು. ಆದರೆ ಅವಳನ್ನು ಏಕೆ ಚಿತ್ರಿಸಬೇಕು?

ಲಕ್ಷ್ಮಿಗೆ ಒಬ್ಬಳು ಹಿರಿಯ ಅವಳಿ ಸಹೋದರಿ ಇರುವಳೆಂಬ ಕಲ್ಪನೆಯು ಪುರಾತನವಾದದ್ದು. ಕೆಲವರು ಲಕ್ಷ್ಮಿಯು ಬ್ರಹ್ಮನ ಮುಖದಿಂದ ಜನಿಸಿದರೆ ಅಲಕ್ಷ್ಮಿಯು ಅವನ ಹಿಂಭಾಗದಿಂದ ಹುಟ್ಟಿದಳೆಂದು ಹೇಳುತ್ತಾರೆ. ಮತ್ತೆ ಕೆಲವರು ಲಕ್ಷ್ಮಿಯು ಸಮುದ್ರ ಮಥನದ ಸಮಯದಲ್ಲಿ ಅಮೃತದೊಂದಿಗೆ ಹೊರಬಂದಳೆಂದೂ ಹಾಗೂ ಅಲಕ್ಷ್ಮಿಯು ಹಾಲಾಹಲದೊಂದಿಗೆ ಬಂದಳೆಂದು ಹೇಳುವರು. ಅಲಕ್ಷ್ಮಿಯನ್ನು ದರಿದ್ರ, ಬಡತನವೇ ಮೂರ್ತಿವೆತ್ತವಳು, ಕಲಹವನ್ನು ಸೃಷ್ಟಿಸುವವಳು ಎಂಬುದಾಗಿ ಗುರುತಿಸಲಾಗುವುದು. ಶಿವಪುರಾಣದಲ್ಲಿ ಅಲಕ್ಷ್ಮಿಯನ್ನು ಶಕ್ತಿಯ ಭಯಾನಕ ರೂಪವಾದ ಕಾಳಿಯನ್ನಾಗಿ ವರ್ಣಿಸಿದರೆ, ಲಕ್ಷ್ಮಿಯನ್ನು ಶಕ್ತಿಯ ಪ್ರೀತಿಯ ರೂಪವಾದ ಗೌರಿಯನ್ನಾಗಿ ಚಿತ್ರಿಸಲಾಗಿದೆ. ವಿಷ್ಣು ಪುರಾಣದಲ್ಲಿ ಲಕ್ಷ್ಮಿಯು ಧರ್ಮವನ್ನು ಪ್ರತಿನಿಧಿಸಿದರೆ, ಅಲಕ್ಷ್ಮಿಯನ್ನು ಅಧರ್ಮವನ್ನಾಗಿ ಪರಿಗಣಿಸಲಾಗಿದೆ. ಹೀಗೆ ಲಕ್ಷ್ಮಿ ಹಾಗೂ ಅಲಕ್ಷ್ಮಿಯರು ಒಂದು ಗೋಲದ ಎರಡು ಹೋಳುಗಳು. ಲಕ್ಷ್ಮಿಯು ಇಷ್ಟಪಡುವ ಹಣ್ಣಾದರೆ, ಅಲಕ್ಷ್ಮಿಯು ತಿರಸ್ಕರಿಸುವ ತ್ಯಾಜ್ಯವಸ್ತು. ಎರಡೂ ಒಂದನ್ನೊಂದು ಬಿಟ್ಟಿರದೆ ಒಂದೆಡೆಯೇ ಇರುವುದು.

ಪುರಾಣದಲ್ಲಿ ಲಕ್ಷ್ಮಿಯು ವ್ಯಕ್ತಿನಿಷ್ಠ ನಿರ್ಣಯವನ್ನು ಮಾಡುವುದಿಲ್ಲ. ಒಂದು ಪಾತ್ರೆಯಲ್ಲಿನ ಅನ್ನವು ಸಂತನಿಗೂ ಮತ್ತು ಪಾಪಾತ್ಮನಿಗೂ ಒಂದೇ ಪರಿಣಾಮವನ್ನು ಉಂಟುಮಾಡುತ್ತದೆ. ಒಂದು ರೂಪಾಯಿಯು ನ್ಯಾಯಾಧೀಶನಲ್ಲೂ ಹಾಗೂ ಕೊಲೆಗಾರನಲ್ಲೂ ಒಂದೇ ಬೆಲೆಯಿರುವುದು. ಆದರೆ ಲಕ್ಷ್ಮಿಯು ಸದಾ ತನ್ನ ಸಹೋದರಿಯೊಂದಿಗೇ ಬರುತ್ತಾಳೆ. ಅಲಕ್ಷ್ಮಿಯನ್ನು ಗುರುತಿಸದೇ ಇದ್ದಲ್ಲಿ ಅದು ಅಪಾಯಕಾರಿ, ಏಕೆಂದರೆ ಸಂಪತ್ತಿನೊಂದಿಗಿನ ಎಲ್ಲ ನಕಾರಾತ್ಮಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಹಣವು ತನ್ನೊಂದಿಗೇ ದುಃಖ ಹಾಗೂ ಅಸೂಯೆಗಳನ್ನು ತರುವುದೆಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅಲಕ್ಷ್ಮಿಯು ಈ ಗುಣಗಳನ್ನೇ ಪ್ರತಿನಿಧಿಸುವಳು. ಶ್ರೀಮಂತ ಸಹೋದರರ ನಡುವಿನ ಜಗಳಗಳಲ್ಲಿ ಅವಳೇ ಇರುವುದು. ಮನೆಯನ್ನು ಒಡೆಯುವವಳೇ ಅವಳು. ಬಂಗಾರದಂತಹ ಮನೆಯಲ್ಲಿ ಶಾಂತಿಯು ಬರದೇ ಇರುವಂತೆ ನೋಡಿಕೊಳ್ಳುವವಳೇ ಅವಳು.

ಅಲಕ್ಷ್ಮಿಯನ್ನು ನಿರ್ವೀರ್ಯಳನ್ನಾಗಿ ಮಾಡುವ ಒಂದೇ ದಾರಿಯೆಂದರೆ ಸದಾ ಅವಳ ಬಗೆಗಿನ ಅರಿವು: ಹಾಗೂ ಲಕ್ಷ್ಮಿಯ ಇರುವಿಕೆಯನ್ನು ಹೇಗೆ ಗುರುತಿಸುವೆವೋ ಅದೇ ರೀತಿ ಅವಳ ಇರುವಿಕೆಯನ್ನೂ ಸದಾ ಗುರುತಿಸುವುದು. ಧಾರ್ಮಿಕ ಕ್ರಿಯೆಗಳಲ್ಲಿ ಹಣ್ಣು ಹಂಪಲುಗಳು ಹಾಗೂ ಸಿಹಿಪದಾರ್ಥಗಳನ್ನು ಮನೆಯೊಳಗೆ ಇರಿಸಿ, ಅದನ್ನು ಲಕ್ಷ್ಮಿಗೆ ಅರ್ಪಿಸಿದರೆ, ಅಲಕ್ಷ್ಮಿಗೆ ನಿಂಬೆಹಣ್ಣು, ಮೆಣಸಿನಕಾಯಿಗಳನ್ನು ಮನೆಯ ಹೊರಗೆ ಇರಿಸಿ ಅರ್ಪಿಸಲಾಗುವುದು. ಧರ್ಮಗ್ರಂಥಗಳ ಪ್ರಕಾರ ಲಕ್ಷ್ಮಿಯು ತನ್ನ ಸಹೋದರಿಯನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಮತ್ತೊಂದು ಮಾತಿನಲ್ಲಿ ಹೇಳುವುದಾದರೆ ಸಂಪತ್ತು ಎಲ್ಲಿಗೂ ದುಃಖವನ್ನು ಬಿಟ್ಟು ಒಂಟಿಯಾಗಿ ಹೋಗುವುದಿಲ್ಲ.

ಒಂದು ಕಥೆಯು ಹೀಗಿದೆ :- ಒಬ್ಬ ವ್ಯಾಪಾರಿಯ ಮನೆಗೆ ಲಕ್ಷ್ಮಿ ಹಾಗೂ ಅಲಕ್ಷ್ಮಿಯರಿಬ್ಬರೂ ಭೇಟಿಕೊಟ್ಟು ತಮ್ಮಿಬ್ಬರಲ್ಲಿ ಯಾರು ಅತಿ ಸುಂದರಿಯರು ಎಂದು ಅವನನ್ನು ಕೇಳಿದರು. ಯಾರೊಬ್ಬರನ್ನೂ ಅತೃಪ್ತಿ ಪಡಿಸಲಾಗದೇ ಭಯಭೀತನಾದ ವ್ಯಾಪಾರಿಯು ಇಬ್ಬರನ್ನೂ ಸಂತೋಷಪಡಿಸುವ ರೀತಿಯಲ್ಲಿ ಜಾಣತನದಿಂದ ಈ ರೀತಿ ಉತ್ತರಿಸಿದ - “ಲಕ್ಷ್ಮಿಯು ನನ್ನೆಡೆಗೆ ಬರುವಾಗ ಸುಂದರಿಯು. ಅಲಕ್ಷ್ಮಿಯು ನನ್ನಿಂದ ದೂರಹೋಗುವಾಗ ಸುಂದರಿ.” ಈ ರೀತಿಯ ಉತ್ತರದಿಂದ ಇಬ್ಬರೂ ಸಂತುಷ್ಟರಾಗಿ, ಅದೃಷ್ಟವು ವ್ಯಾಪಾರಿಯೆಡೆಗೆ ಬಂದಿತು ಹಾಗೂ ದುರಾದೃಷ್ಟವು ಅವನಿಂದ ದೂರಾಯಿತು.

ಈಗಾದರೋ, ನಾವುಗಳು ದುಃಖ ಹಾಗೂ ದುರಾದೃಷ್ಟಗಳನ್ನು ನಮ್ಮ ಮನೆಯೊಳಗೆ ಆಮಂತ್ರಿಸುತ್ತೇವೆ. ಟೀವಿ ಮಾಧ್ಯಮಗಳು ದುಃಖ, ಹಿಂಸಾಚಾರ, ಅತ್ಯಾಚಾರಗಳನ್ನು ವೈಭವಿಕರಿಸುತ್ತವೆ. ಟೆಲಿವಿಷನ್ನಿನ ಎಲ್ಲ ಧಾರಾವಾಹಿಗಳೂ ಹಿಂಸೆ ಹಾಗೂ ದುಃಖಾಧಾರಿತ ವಿಷಯಗಳಿಂದ ಕೂಡಿರುವುದು. ಎಲ್ಲೆಲ್ಲೂ ಎಲ್ಲರೂ ಹೊಡೆದಾಟ ಬಡಿದಾಟಗಳಲ್ಲಿ ತಲ್ಲೀನರಾಗಿರುವರು. ಯುವಕರು ರಿಯಾಲಿಟಿ ಶೋಗಳಲ್ಲಿ ಹೊಡೆದಾಡುತ್ತಿದ್ದರೆ, ವೀಕ್ಷಕರು ಅದನ್ನು ಪ್ರೀತಿಸುವರು. ನ್ಯಾಯಾಧೀಶರು ಹೊಡೆದಾಡಿಕೊಳ್ಳುತ್ತಿರುವರು, ಸಂಗೀತಗಾರರೂ ಹೊಡೆದಾಡಿಕೊಳ್ಳುತ್ತಿರುವರು, ನಾವುಗಳು ಮನೆಯಲ್ಲಿ ಪರಸ್ಪರ ಸಂತೋಷದ ಸಮಯವನ್ನು ಕಳೆಯುವುದನ್ನು ಬಿಟ್ಟು ಈ ರೀತಿಯ ಅಶಾಂತಿಯ ಕಾರ್ಯಕ್ರಮಗಳನ್ನು ರಾತ್ರೆ ಊಟಮಾಡುವ ಸಮಯದಲ್ಲಿ ನೋಡುತ್ತಾ ನಮ್ಮಲ್ಲಿನ ಶಾಂತಿಯನ್ನು ಹೊಡೆದೋಡಿಸುತ್ತಿರುವೆವು. ಯುದ್ಧವನ್ನು ಮನರಂಜನೆಯನ್ನಾಗಿ ಪ್ರಸ್ತುತ ಪಡಿಸುತ್ತೇವೆ. ಅತ್ಯಾಚಾರ, ಅನಾಚಾರ ಮತ್ತು ಕೊಲೆ, ಸುಲಿಗೆಗಳಿಂದ ಕೂಡಿದ ಪ್ರದರ್ಶನಗಳು ನಮ್ಮಲ್ಲಿನ ವಿಕೃತಕಾಮನೆಗಳನ್ನು ವೃದ್ಧಿಸುತ್ತವೆ. ಇವೆಲ್ಲವೂ ನಡೆಯುತ್ತಿರುವುದು ನಮ್ಮ ಭಾರತದೇಶವು ಸ್ವಾತಂತ್ರ್ಯ ಹಾಗೂ ಉದಾರೀಕರಣದ ಫಲವನ್ನು ಅನುಭವಿಸುತ್ತಿರುವ ಸಮಯದಲ್ಲಿ! ಉಹೆಮಾಡಿ, ಲಕ್ಷ್ಮಿಯನ್ನು ಬೆನ್ನಟ್ಟುವ ಭರದಲ್ಲಿ ನಾವುಗಳು ಅಲಕ್ಷ್ಮಿಯನ್ನು ಅತ್ಯಂತ ಪ್ರೀತಿ ಹಾಗೂ ಗೌರವಗಳಿಂದ, “ಹೊರಹೋಗು!” ಎನ್ನುವುದನ್ನು ಮರೆತಿದ್ದೇವೆ ಅಲ್ಲವೇ?




No comments:

Post a Comment

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ ಹಿಂದೂ ಧರ್ಮದ ಇತಿಹಾಸವು 5000 ವರ್ಷಗಳಿಗೂ ಹಿಂದಕ್ಕೆ ಹರಡಿದೆ ಮತ್ತು ಎಂಟು ಹಂತಗಳಾಗಿ ಒಂದರಲ್ಲೊಂದು ಸೇರಿಕೊಂಡಂತ...